Sunday, May 24, 2026

ಚಾರ್ ಧಾಮ್ ಯಾತ್ರೆ - ಪ್ರವಾಸ/ಪ್ರಯಾಸ ಕಥನ




ಓದುಗರ ಗಮನಕ್ಕೆ

1. ಇದು ಕ್ಲಿಷ್ಟಕರ ಪ್ರವಾಸ.  ಮಾನಸಿಕ ಆರೋಗ್ಯ ಮತ್ತು ಪೂರ್ವಸಿದ್ಧತೆ ಅತ್ಯಗತ್ಯ

2. ನಾವು ಬಯಸುವುದು ಒಂದು ಅದು ಆಗುವುದು ಇನ್ನೊಂದು

3. ಪ್ರವಾಸಿಗರು/ ಭಕ್ತರ ಪ್ರವಾಹ - ಇದು ಮೇ ತಿಂಗಳ ಅನುಭವ

4. ರಸ್ತೆಗಳು ಕಿರಿದು ಮತ್ತು ಕಠಿಣ.  ಸಣ್ಣ ಗಾಡಿಗಳಾದರೂ ಕ್ರಮಿಸುವ ಅವಧಿ ಅನಿಶ್ಚಿತ.

5. ವಾತಾವರಣ ಬಹಳ ಬದಲಾಗುತ್ತಿರುತ್ತದೆ. ಮುಖ್ಯ ಸ್ಥಳಗಳಲ್ಲಿ,  ಕೆಲವೆಡೆ -ve ಇದ್ದರೆ. ತಂಗುವ ಪ್ರದೇಶಗಳಲ್ಲಿ 30' ತನಕ ಇರುತ್ತದೆ

6. ನಿದ್ರೆ , ಆಹಾರ, ಮಲ ಮೂತ್ರ ವಿಸರ್ಜನೆ ಕೂಡಾ ಅವೇಳೆಯಲ್ಲಿ , ತುಂಬಾ ಬದಲಾವಣೆಯಾಗುತ್ತದೆ

7. ಬಹಳ ಕಡೆ ದರ್ಶನ ಮಾಡುವ ವ್ಯವಸ್ಥೆ ಇಲ್ಲ.

 

ವಿವರಣೆ :

ಚಾರ್ ಧಾಮ್ ಎಂದರೆ ಎರಡು ವಿಧವಾಗಿ ಗುರುತಿಸುತ್ತಾರೆ. ಯಮುನೋತ್ರಿ, ಗಂಗೋತ್ರಿ, ಕೇದಾರನಾಥ, ಬದರಿನಾಥ ಇದು ಸಾಮಾನ್ಯವಾಗಿ ಹೇಳುವುದು.  ಕೆಲವರು ಬದರಿನಾಥ, ದ್ವಾರಕ, ಪುರಿ ಮತ್ತು ರಾಮೇಶ್ವರ ಗಳಿಗೆ ಕೂಡ ಹೀಗೆ ಹೇಳುತ್ತಾರೆ. ನಾವು ಮಾಡಿದ್ದು ಮೊದಲನೆಯ ಯಾತ್ರೆ. ನಾವು IRCTC ಮೂಲಕ 13 ರಾತ್ರಿಗಳ ಪ್ರವಾಸಕ್ಕೆ ರಿಜಿಸ್ಟರ್ ಮಾಡಿದ್ದೆವು. ಇದು ಬೆಂಗಳೂರುನಿಂದ ಬೆಂಗಳೂರಿಗೆ ಇರುವ ಪ್ರವಾಸ.   ದೆಹಲಿ ತನಕ ವಿಮಾನಯಾನ.  ನಂತರ ಹರಿದ್ವಾರ ತನಕ ಸಾಮಾನ್ಯ ಬಸ್ಸು.  ನಂತರ ಚೆಕ್ಕ 27 ಜನಗಳ ಸಣ್ಣ ಬಸ್ಸು ಇಲ್ಲಿನ ಸಾಮಾನ್ಯ ವ್ಯವಸ್ಥೆ.  24 ಜನ ಸಹ ಪ್ರಯಾಣಿಕರು ಮತ್ತು ಒಬ್ಬ ಕನ್ನಡ ಮಾತನಾಡುವ ಟೂರ್ ಗೈಡ್ ಇದ್ದರು.  ಚೆನ್ನೈ ನಿಂದ ಇಷ್ಟೆ ಜನ ಬೇರೆ ಬಸ್ಸು ಹತ್ತಿ ನಮ್ಮ ಜೊತೆಗೆ ಪ್ರಯಾಣ ಮಾಡಿದರು.  7 ಜನ ಅಡಿಗೆ ಮಾಡುವ ಜನ ಮತ್ತು ಅವರಿಗೆ ಬೇಕಾಗುವ ಸರಂಜಾಮು ಹೊತ್ತು ಗಾಡಿ ಮತ್ತೊಂದು.  ಒಟ್ಟು ಮೂರು ಗಾಡಿಗಳು ಎಲ್ಲಾ ಕಡೆಯೂ ಜೊತೆಗೆ ಹೋದೆವು, ಯಮುನೋತ್ರಿ (7 ಕೀ ಮೀ ) ಮತ್ತು ಕೇದಾರನಾಥ ( 19 ಕೀ ಮೀ ) ಧಾಮಗಳು ಶ್ರಮ ಹೆಚ್ಚು.  ಗಂಗೋತ್ರಿ ಮತ್ತು ಬದರಿನಾಥ ಬಸ್ ಹೋಗುತ್ತದೆ. ದಾರಿಯಲ್ಲಿ ಹಲವಾರು ನದಿ ಸಂಗಮಗಳು, ದೇವಸ್ಥಾನಗಳು ಸಿಗುತ್ತವೆ.  ಕೊನೆಯಲ್ಲಿ ಸ್ವಲ್ಪ ವಿವರಣೆ ಕೊಟ್ಟಿದ್ದೇನೆ  ಉತ್ತರಖಂಡದಲ್ಲಿ 5 ಘಂಟೆಗೆ ಬೆಳಗುತ್ತದೆ.  ಹತ್ತುವುದಕ್ಕೆ ಇದು ಅತ್ಯುತ್ತಮ ಸಮಯ 8 ಘಂಟೆಗೆ ಬಿಸಿಲಿನ ತಾಪ ಶುರುವಾಗುತ್ತದೆ.. ಮತ್ತೆ  1 ಘಂಟೆ ಹೊತ್ತಿಗೆ ಹಿಮ ಮತ್ತು ಸಣ್ಣ ಮಳೆ ಶುರುವಾಗುತ್ತದೆ.   ಅಷ್ಟು ಹೊತ್ತಿಗೆ ಹತ್ತು ದರ್ಶನ ಮಾಡಿ ಇಳಿಯುವುದು ಲೇಸು

 

ಯಮುನೋತ್ರಿ: ಇದು ನಮ್ಮ ಮೊದಲ ಧಾಮ.  ಹರಿದ್ವಾರದಲ್ಲಿ (ದಿನ 1) ಒಂದು ರಾತ್ರಿ ವಿಶ್ರಾಂತಿ ಪಡೆದು, ನಂತರ ಬಾರಾಕೋಟ್ ಎಂಬ ಸ್ಥಳಕ್ಕೆ ಹೋದೆವು.  ಅಲ್ಲಿ ನಮ್ಮ ಒಂದು ರಾತ್ರಿ (ದಿನ 2) ಇದ್ದು ಮುಂದಿನ ದಿನ (ದಿನ 3) ಯಮುನೋತ್ರಿ ಹತ್ತಿದ್ದೆವು.  ಬಸ್ ನಿಲ್ದಾಣದ ಸ್ಥಳಕ್ಕೆ ಜಾನಕಿಜೆಟ್ಟಿ ಎಂದು ಕರೆಯುತ್ತಾರೆ.  ಇಲ್ಲಿಂದ ಇದು ಸುಮಾರು 7 ಕಿಮೀ ಯ  ಸಣ್ಣ , ಕಷ್ಟಕರವಾದ ರಸ್ತೆ.  ನಾನು ನಡೆದು ಹತ್ತಿದೆ ಮತ್ತು ಇಳಿದೆ.   ಇಲ್ಲಿ ಅಶಕ್ತರಿಗೆ ಬೇರೆ ವ್ಯವಸ್ಥೆ ಇದೆ.  ಕುದುರೆ ಮೇಲೆ ( ಹತ್ತಿ ಇಳಿಯಲು ಸುಮಾರು ಮೂರು ಸಾವಿರ ರೂಪಾಯಿ)., ನಾಲ್ಕು ಜನ ಎತ್ತುವ ಡೋಲಿ ವ್ಯವಸ್ಥೆಗೆ ( ಸುಮಾರು ಎಂಟು ಸಾವಿರ ) ಆಗುತ್ತದೆ. ನಡೆಯುವಾಗ ಕುದುರೆ, ಡೋಲಿ ಅಡ್ಡ ಬರುತ್ತಿರುತ್ತದೆ.  ಆದುದರಿಂದ 5 ಗಂಟೆ ಹತ್ತಲು ಮತ್ತು  3 ಗಂಟೆ ಇಳಿಯಲು ಬೇಕಾಗುತ್ತದೆ.   ಮೇಲೆ ಮಂದಿರದ ಹತ್ತಿರ ಒಂದು ಹಾಟ್ ಸ್ಪ್ರಿಂಗ್ಸ್ ಇದೆ.  ಕೆಲವರು ಸ್ನಾನ ಮಾಡಿದರು.  ಇಲ್ಲಿ ದರ್ಶನ ಸುಲಭ, 15 ನಿಮಿಷಗಳ ಸಾಮಾನ್ಯ ಸರತಿ ಸಾಕು. ಮತ್ತೆ ಬಾರಾಕೋಟ್ ಗೆ ಬಂದು ರಾತ್ರಿ ಕಳೆದೆವು

ದಿನ 4 ಬಾರಾಕೋಟ್ ಇಂದ ಉತ್ತರಕಾಶಿ ತಲುಪಿದೆವು  ಸಂಜೆ ವಿಶ್ವನಾಥನ ದರುಶನ ಪಡೆದೆವು.

 ಗಂಗೋತ್ರಿ : (ದಿನ 5 ) ಉತ್ತರ ಕಾಶಿಯಿಂದ ಗಂಗೋತ್ರಿ ತಲುಪಿದೆವು. ಇಲ್ಲಿ ಬಸ್ ನಿಲ್ದಾಣದಿಂದ ಮಂದಿರಕ್ಕೆ ಸುಮಾರು ಒಂದುವರೆ ಕೀ ಮೀ ಆಗುತ್ತದೆ. 500 ರೂಪಾಯಿಗಳ ವಿಶೇಷ ದರುಶನ ಪಡೆದು 30ನಿಮಿಷಗಳ ಒಳಗೆ ಗಂಗಾಮಾತೆಯ ದರುಶನ ಆಯಿತು . ನದಿ ತೀರದಲ್ಲಿ  ಪುರೋಹಿತರ ಪೂಜೆ ಒಂದು ಗಂಟೆ ನಡೆಯಿತು.  ನಂತರ ಪಯಣಿಸಿ  ಉತ್ತಾರಕಾಶಿಯಲ್ಲಿ ನಾವು ಉಳಿದುಕೊಂಡಿದ್ದ ಹೋಟೆಲ್ ತಲುಪಿದೆವು.

ಮಾರನೇದಿನ ( ದಿನ 6) ಉತ್ತಾರಕಾಶಿ ಇಂದ ಸೀತಾಪುರ ಹತ್ತಿರದ ಹೋಟೆಲ್ ಗೆ ತಲುಪಿದೆವು. ಕೇವಲ 2 ಘಂಟೆ ನಿದ್ದೆ.  ಬೆಳಿಗ್ಗೆ 2 ಘಂಟೆಗೆ ಹೊರೆಟೆವು.

 ಕೇದಾರನಾಥ : ( ದಿನ 7) ಇದು ಅತೀ ದುರ್ಗಮ ಧಾಮ.   8 ಜನ ಸಹ ಪ್ರಯಾಣಿಕರು ಹೆಲಿಕಾಪ್ಟರ್ ಮೂಲಕ ಬುಕ್ ಮಾಡಿದ್ದರು.  ಅವರು ಬೇರೆ  ಕಡೆ ಹೋದರು.   ಪಾಪ, ಅವರ ಹೆಲಿಕಾಪ್ಟರ್ ಹವಾಮಾನ ವೈಪರೀತ್ಯ ಇಂದ ಕ್ಯಾನ್ಸಲ್ ಆಯ್ತು.  ಅದರಲ್ಲಿ ಕೆಲವರು ನಾವು ಶುರು ಮಾಡಿದ  9 ಘಂಟೆಗಳ ನಂತರ ಶುರು ಮಾಡಿದರು.  ಬಸ್ ನಿಲ್ದಾಣದಿಂದ ಸುಮಾರು ಒಂದೂವರೆ ಕಿಮೀ ನಡೆದು ಸೋನಪ್ರಯಾಗ ತಲುಪಿದೆವು.  ಅಲ್ಲಿಂದ ಜೀಪ್ ನಲ್ಲಿ 5 ಕಿಮೀ ಹೋಗಿ ಗೌರಿಕುಂಡ ಎಂಬ ಸ್ಥಳ ತಲುಪಿದೆವು.  ಇಲ್ಲೂ ಸುಮಾರು 1 ಕಿಮೀ ನಡೆಯಲೇಬೇಕು.   ಗೌರಿಕುಂಡದಲ್ಲಿ ಬಿಸಿನೀರಿನ ಬುಗ್ಗೆ ಮತ್ತು ಗೌರೀ ದೇವಿಯ ಮಂದಿರ ಇದೆ.   ಇಲ್ಲಿ ಡೋಲಿ, ಕುದುರೆಗಳಿಗೆ ಹೋಗುವವರಿಗೆ ವ್ಯವಸ್ಥೆ ಸುಮಾರು ಅರ್ಧ ಕೀ ಮೀ ಯಲ್ಲಿ ಸಿಗುತ್ತದೆ.  ಇಲ್ಲಿ ಕುದುರೆಗೆ ಹತ್ತಲು ರೂಪಾಯಿ 3500 ಮತ್ತು ಡೋಲಿಗೆ ರೂಪಾಯಿ 9000 ದಿಂದ 12000 ತನಕ ಇತ್ತು. ತೂಕದ ಮೇಲೆ  ಚೌಕಶಿತನದ ಮೇಲೆ ಬೆಲೆ ನಿರ್ಧಾರ.  ಅವರಿಗೆ ಆಹಾರ ಒದಗಿಸುವುದು ಕರ್ತವ್ಯ.  ಅಲ್ಲಿಂದ ಒಂದು ಹೊಸದಾಗಿ ನಿರ್ಮಿತವಾದ ದ್ವಾರ ಇದೆ.  ಅಲ್ಲಿಂದ 15.5 ಕೀ ಮೀ.  ಬೋರ್ಡ್ ಇದೆ. ನಾನು ಮತ್ತು ನನ್ನ ವೈದ್ಯ  ಸಹ-ಪ್ರಯಾಣಿಕರು ನಡೆದೇ ಹೋಗುವ ನಿರ್ಧಾರ ಮಾಡಿದ್ದೆವು.   ಬೆಳಿಗ್ಗೆ 5 30 ಕ್ಕೆ ಶುರು ಮಾಡಿದೆವು.  ಈ ರಸ್ತೆ ಸ್ವಲ್ಪ ಅಗಲವಾಗಿದ್ದರೂ ತುಂಬಾ ಕಠಿಣ ಮತ್ತು ಘಾಟ್ ರೋಡ್ ಗಳ ಹಾಗೆ ಸುತ್ತಿ ಸುತ್ತಿ ಹೋಗಬೇಕು.  ಎಂದಿನಂತೆ ಕುದುರೆ ಮತ್ತು ಡೋಲಿ ಅಡ್ಡ ಬರುತ್ತಿರುತ್ತದೆ.  

ಹಲವುಬಾರಿ ನಿಂಬೆರಸ, ಕಲ್ಲಂಗಡಿ, ಬಾಳೆಹಣ್ಣು ತಿನ್ನುವುದು.. ಒಂದು ಕೀ ಮೀ ಹತ್ತಿದಾಗ ಒಮ್ಮೆ ವಿಶ್ರಾಂತಿ.  ಮೇಲುಕಡೆಯಿಂದ ನೋಡಿದಾಗ ಪ್ರಕೃತಿ ರುದ್ರ,ರಮಣೀಯ.  ಕಷ್ಟಪಟ್ಟು ಹತ್ತಿ ಇನ್ನೂ 2.5 ಕೀ ಮೀ ಇದ್ದಾಗ, ಘಂಟೆ ಸುಮಾರು 1 ಮಧ್ಯಾಹ್ನ.  ಇದ್ದಕಿದ್ದಂತೆ ಹಿಮ/ ಮಳೆ ಶುರುವಾಯಿತು.  ಅಲ್ಲಿದ್ದವರು ಇನ್ನೂ ಹೋಗುವುದು ಕಷ್ಟ ಎಂದರು.  ನಾವು ಕೊನೆಗೆ  700 ರೂಪಾಯಿ ಕೊಟ್ಟು ಕುದುರೆ ಹತ್ತಿದೆವು.  ಅವರು 1.5 ಕೀ ಮೀ ನಂತರ ಕುದುರೆ ಸ್ಟ್ಯಾಂಡ್ ಬಂತು. ಮತ್ತೆ ಇಳಿದು. ನಾವೊಂದು ಕಾಟೇಜ್ ಬುಕ್ ಮಾಡಿದ್ದೆವು.. ಅಲ್ಲಿಗೆ ಹೋಗಿ.. ಸ್ವಲ್ಪ ಫ್ರೆಶ್ ಆಗಿ.. ದರ್ಶನದ ಕ್ಯೂ ನಿಂತೆ..  ಗಂಟೆಗೆ ನಿಂತಿದ್ದು 7 ಘಂಟೆಗೆ ದರ್ಶನ ಆಯ್ತು.  ನಮ್ಮಲ್ಲಿ ಕೆಲವರು ಅಲ್ಲಿಯ ಪುರೋಹಿತರನ್ನು ಹಿಡಿದು, ಎರಡು, ಮೂರು ಸಾವಿರ ಕೊಟ್ಟು.. ಕೊನೆಗೆ ರಾತ್ರಿ 12 ಘಂಟೆ ಕೆಲವರು ಮಾರನೇದಿನ ಬೆಳ್ಳಿಗೆ ದರ್ಶನ ಮಾಡಿದ್ದಾರೆ.   ನಾನು ದರ್ಶನದ ನಂತರ ಕಾಟೇಜ್ ನಲ್ಲಿ ರಾತ್ರಿ ಮಲಗಿದೆ. -ve  ಉಷ್ಣಾಂಶ.  ಒಳ್ಳೆಯ ನಿದ್ರೆ.  (ದಿನ 8)  ಬೆಳಿಗ್ಗೆ 5 ಘಂಟೆಗೆ ಇಳಿಯಲು ಶುರು ಮಾಡಿದೆ.  ಇಳಿಯುವುದು ಸ್ವಲ್ಪ ಸುಲಭ ಅನ್ನಿಸಿತು.  ಯಾವುದೇ ವಿರಾಮ ಇಲ್ಲದೆ 8 ಘಂಟೆಗೆ ಅರ್ಧಕ್ಕಿಂತ ಹೆಚ್ಚು ದಾರಿ ಇಳಿದಿದ್ದು.  ಈ ಬಾರಿ ನಾನೊಬ್ಬನೇ ಆದೆ.   ಶ್ರಮಪಟ್ಟು ಮತ್ತೂ ಇಳಿದು ಗೌರಿಕುಂಡ ತಲುಪಿದಾಗ 1 ಘಂಟೆ ಆಗಿತ್ತು.  ಅಲ್ಲಿಂದ  ನಡೆದು ಜೀಪ್ ಗಾಗಿ ನುಗ್ಗಿ, ನುಸುಳಿ ಹತ್ತಿದೆ.  ಇಲ್ಲಿ ಯಾವುದೇ ಸರತಿ / ವ್ಯವಸ್ಥೆ ಇಲ್ಲ.  ನುಗ್ಗಿ ಹತ್ತುವುದೇ ಇರುವ ಅವಕಾಶ.  ಜೀಪ್ ನಲ್ಲಿ 5 ಕೀ ಮೀ ಬಂದು ಸೋನಾಪ್ರಯಾಗದಲ್ಲಿ  ಬೈಕ್ ಸವಾರರ ಜೊತೆಗೆ ಹೋಟೆಲ್ ತಲುಪಿದಾಗ ಎರಡುಗಂಟೆ.  ಸ್ನಾನ ಮಾಡಿ ಊಟ ಮಾಡುವ ವಿರಮಿಸುವಾಗ ಏನೋ ಸಾಧಿಸಿದ ಹೆಮ್ಮೆ 😄😄

ದಿನ 9 ಸೀತಾಪುರ್ ಇಂದ ಪೀಪಲ್ಕೋಟಿ ಎಂಬ ಜಾಗಕ್ಕೆ ಪ್ರಯಾಣ.  ದಾರಿಯಲ್ಲಿ ಹಲವಾರು ಸಂಗಮ ನೋಡಿದೆವು.  

ದಿನ 10 ಬದರಿನಾಥ ಮಂದಿರಕ್ಕೆ ಹೋದೆವು.  ಬೇಗ ಹೊರಟರು ಕೂಡಾ, ಬಸ್ ನಿಲ್ದಾಣದಿಂದ ದರ್ಶನಕ್ಕೆ ಸರತಿ ನಿಂತಾಗ 9 ಘಂಟೆ.   ಈ ಸರತಿ 2.5 km ಇತ್ತು.. ನಿಧಾನವಾಗಿ ಸಾಗುತಿತ್ತು.  ಮಂದಿರಕ್ಕೆ ಬೊಗ್/ ನೈವೇದ್ಯ ಸಮಯದಲ್ಲಿ ಬಾಗಿ ಮುಚ್ಚುತ್ತಾರೆ.  7 ಗಂಟೆಗಳ ನಂತರ ಬದರೀ ನಾರಾಯಣರ ದರ್ಶನ ಆಯ್ತು.. ಊಟ ಇಲ್ಲ.  ಹಾದಿಯಲ್ಲಿ ಸಿಗುವ ಟೀ ಬಿಸ್ಕತ್ ಗಳೇ ಆಧಾರ.  5 ಘಂಟೆಗೆ ಬಸ್ ಹೊರಡಿತು.  ನಿರ್ಧಾರಿತ ಮಾನ ಎಂಬ ಜಾಗ ಅಲ್ಲಿಂದ ವ್ಯಾಸ ಗುಹೆ, ಗಣೇಶ ಬರೆಯುವ ಜಾಗ,  ಸರಸ್ವತಿಯ ಹರಿವು ಮತ್ತು ಪಾಂಡವರ ಸ್ವರ್ಗವಾಸ ಜಾಗ ಇವೆಲ್ಲಾ  ಸಮಯದ ಅಭಾವದಿಂದ ತಪ್ಪಿತು ☹️☹️. ವಾಪಸ್ ಹೋಟೆಲ್ ಬಂದು ವಿಶ್ರಾಂತಿ.

ದಿನ 11 ಪೀಪಲ್ಕೋಟಿ ಇಂದ ಹೊರಟಾಗ  ದಾರಿಯಲ್ಲಿ ದೇವಪ್ರಯಾಗ ( ಆಲಕಾನಂದ ಮತ್ತು ಭಾಗೀರಥಿ ನದಿಗಳ ಸಂಗಮ) ದಾಟಿ, ಋಷಿಕೇಶ ತಲುಪಿದೆವುಋಷಿಕೇಶ ಅನೇಕ ಆಶ್ರಮಗಳು, ಪುರಾತನ ಮಂದಿರಗಳು ಇವೆಗಂಗಾ ನದಿ  ಪ್ರಶಾಂತವಾಗಿ ಹರಿಯುತ್ತದೆನಮಗೆ ಇರುವ ಸಮಯದಲ್ಲಿ ಮುಖ್ಯವಾಗಿ ಸೇತುವೆಗಳು - ಲಕ್ಷ್ಮಣ್ ಜೂಲಾ ಮತ್ತು ರಾಮ್ ಜೂಲಾ , ಗೀತಾ ಮಂದಿರ, ಲಕ್ಷ್ಮೀ ನಾರಾಯಣ ಮಂದಿರಗಳಿಗೆ ಹೋದೆವು.  ಕೊನೆಗೆ ಹರಿದ್ವಾರ ಮುಟ್ಟಿದೆವು





 ದಿನ 12 ಹರಿದ್ವಾರದ ಲೋಕಲ್ ದರ್ಶನ ಇಂದಿನ ಕಾರ್ಯಕ್ರಮ .  ಬೆಳಿಗ್ಗೆ ಆಟೋಗಳು ಮಾಡಿಕೊಂಡು  ಹೋಗಿ ಚಂಡೀದೇವಿ ಮತ್ತು ಮಾನಸಾದೇವಿ ನೋಡಿ ಬಂದೆವು ಎರಡೂ ಬೆಟ್ಟಗಳ ಮೇಲೆ ಇವೆ .  ರೋಪ್ ವೆ ಇವೆ.  ಒಳ್ಳೆಯ ವ್ಯವಸ್ಥೆ.  ಸಂಜೆ ಗಂಗಾ ಆರತಿಯ ವೀಕ್ಷಣೆ. 

 ದಿನ 13 ಹರಿದ್ವಾರದಿಂದ ದೆಹಲಿಗೆ ಬಂದು ವಿಮಾನ ಹತ್ತಿದೆವು.

ಪ್ರಯಾಗ್ ( ಸಂಗಮ ) .  ಗಂಗಾನದಿಗೆ ಪೌರಾಣಿಕ ಮತ್ತು ಐತಿಹಾಸಿಕ ವಿಶೇಷಗಳು ಇವೆ.  ಬೂದಿಯಾದ ತನ್ನ ಹಿರಿಯರ ಮೋಕ್ಷಕ್ಕಾಗಿ. ಭಗೀರಥ,  ತಪಸ್ಸು ಮಾಡಿ ದೇವನದಿ ಗಂಗೆಯನ್ನು ತಂದಾಗ, ರಭಸಕ್ಕೆ ನಲುಗಿದ ಭೂದೇವಿಯ ಪ್ರಾರ್ಥನೆಗೆ ಶಿವ ತನ್ನ  ಜಟೆಯಲ್ಲಿ ಹಿಡಿದು, ಮತ್ತೆ ಭಗೀರಥನ  ಪ್ರಾರ್ಥನೆಗೆ ಮಣಿದು ಗಂಗೆ ಮತ್ತೆ ಧರೆಗೆ ಹರಿದು ಬಂದಳು.  ಎಲ್ಲರಿಗೂ ತಿಳಿದ ಹಾಗೆ ಗಂಗೆ ಕೋಟ್ಯಾಂತರ ಜನರ ಜೀವನಕ್ಕೆ ಆಧಾರ.  ದಡಗಳಲ್ಲಿ  ಸಾವಿರಾರು ಪಟ್ಟಣಗಳು, ನಗರಗಳು, ಮಂದಿರಗಳು ಇವೆ.   ಈ ಗಂಗೆ ಆಗುವಾಗ ಹಿಮಾಲಯದಿಂದ ಬರುವ ಹಲವು ಉಪನದಿಗಳು ಸೇರಿ ಈ ಮಹಾನದಿ ಆಗುತ್ತದೆ.  ಈ ಉಪನದಿಗಳು ಸೇರುವ ಸಂಗಮಗಳನ್ನು ಪ್ರಯಾಗ  ಎನ್ನುತ್ತಾರೆ.  ವಿಷ್ಣು ಪ್ರಾಯಗ, ಕರ್ಣ ಪ್ರಾಯಗ . ಚಿತ್ರದಲ್ಲಿ ಈ ಎಲ್ಲವನ್ನೂ ತೋರಿಸಿದೆ.



ಮೊದಲೇ ತಿಳಿಸಿದ ಹಾಗೆ, ಜನ ಜಂಗುಳಿಯಿಂದ ಉತ್ತರಖಂಡ ಹೆಚ್ಚು ವ್ಯವಸ್ಥೆ ಸಾಧ್ಯವಿಲ್ಲ.  ಎಲ್ಲಾ ಧಾಮಗಳ ದರ್ಶನ ಮಾಡಿದ ತೃಪ್ತಿ.  ಹವಾಮಾನ ಬದಲಾವಣೆಯಿಂದ ಎಲ್ಲರ ಮೂಗು ಸೋರಿಕೆ, ಕೆಮ್ಮು ಸಹಜ.  ಬಾರ ಹೃದಯದಿಂದ  ಮನೆ ಸೇರಿದಾಗ ಮಂಗಳವಾರದ ನಸು ಮುಂಜಾವು.