ಬಹಳ ದಿನಗಳ ನಂತರ ಬರೆಯುತ್ತಿದ್ದೇನೆ. ನಾನು ಸಾಹಿತಿಯಲ್ಲ. ಮಾಡಿದ ಯಾತ್ರೆಯ ಅನುಭವ ಹಂಚಿದರೆ.. ಯಾರಿಗಾದರೂ ಉಪಯೋಗವಾಗಬಹುದು ಎನ್ನುವ ನಿರೀಕ್ಷೆ.
ISKCON, ಮಂಗಳೂರು, 4 ದಿನಗಳ ವೃಂದಾವನ, ಮಥುರ.. ಯಾತ್ರೆ ಆಯೋಜಿಸಿ ತಿಳಿಸಿದಾಗ register ಮಾಡಿದೆ, ನನ್ನೊಡನೆ 500 ಭಕ್ತಾದಿಗಳು ಬರುತ್ತಾರೆ ತಿಳಿದು ಸಂತೋಷವಾಯಿತು. ಇಸ್ಕಾನ್, ನಿಮಗೂ ತಿಳಿದಿರುವ ಹಾಗೆ ಎಲ್ಲಾವನ್ನೂ ಅಚ್ಚುಕಟ್ಟಾಗಿ ಮಾಡುತ್ತಾರೆ. ಸಮಯ ಸರಿಯಾಗಿ ಎಲ್ಲಾ ಕಾರ್ಯಕ್ರಮ ನಡೆಯುತ್ತವೆ.. ಪ್ರತಿದಿನದ ಕಾರ್ಯಕ್ರಮ, ತಂಗುದಾಣ - ಕೊಠಡಿ ಸಂಖ್ಯೆ ಕೂಡ ಮೊದಲೇ ತಿಳಿಸಿದ್ದರು ! ಯಾತ್ರೆ 4 ದಿನವಾದರೂ ಪ್ರಯಾಣ ಸೇರಿ ಒಂದು ವಾರ ಹೊರಗಿರಬೇಕಾಗುತ್ತದೆ. 36 ಗಂಟೆಗಳ ರೈಲ್ ಪ್ರಯಾಣ, ವಾಪಸ್ಸು ವಿಮಾನಯಾನದ ಪೂರ್ವಸಿದ್ಧತೆ ಮಾಡಿದ್ದಾಗಿತ್ತು
ದಿನ 0 - ಒಂದು ದಿನ ಬೇಗ ತಲುಪಿದ್ದು ಎರಡು ಮುಖ್ಯ ದೇವಸ್ಥಾನಗಳನ್ನು ನೋಡಿದೆವು. ಒಂದು ಇಸ್ಕಾನ್ ದೇವಸ್ಥಾನ. ಊರಿನ ಮಧ್ಯೆಯಲ್ಲಿರುವ ಇದನ್ನು ಯಾರಾದರೂ ಸುಲುಭವಾಗಿ ತೋರಿಸುತ್ತಾರೆ. ಭವ್ಯ ಅಮೃತಶಿಲೆ ಕಟ್ಟಡ. ಪ್ರವೇಶಿಸಿದಂತೆ.. ಮುಂದೆ ಪ್ರಭುಪಾದರ ಸ್ಥಳ, ಅದೇ ಮಹಡಿಯಲ್ಲಿ ನಾಮ ಸಂಕೀರ್ತನೆಗೆ ಅವಕಾಶ.. ಮುಂದೆ ಹೋದರೆ.. ಮಧ್ಯೆ ಜಾಗ ಬಿಟ್ಟು ಸುತ್ತಲೂ ಕಟ್ಟಿರುವ ಮಂದಿರ.. ಎಂದಿನಂತೆ, ಮಧ್ಯೆ ಕೃಷ್ಣ ಬಲರಾಮ, ಬಲ ಬದಿಯಲ್ಲಿ ರಾಧ ಕೃಷ್ಣ, ಎಡಬದಿಯಲ್ಲಿ ಗೌರಂಗ, ನಿತ್ಯಾನಂದ.. ತುಂಬಾ ಚೆನ್ನಾಗಿ ಅಲಂಕಾರ ಮಾಡಿರುತ್ತಾರೆ.. ಬೆಂಗಳೂರಿನ ಇಸ್ಕಾನ್ ನೋಡಿದ್ದರೆ.. ಇದು ಚಿಕ್ಕದು.. ಆದರೆ ಮಹತ್ವದ್ದು. ಊರಿನಲ್ಲಿ ಇರುವ ಎಷ್ಟೊಂದು ದೇವಸ್ಥಾನಗಳನ್ನು, ಪ್ರಭುಪಾದರ ಶಿಷ್ಯರು ಕಟ್ಟಿಸಿದ್ದಾರೆ.. ಎಲ್ಲವೂ ವಿಶೇಷ..
ದಿನ 1 : ದಿನಚರಿ ಶುರುವಾಯಿತು. ಬೆಳಿಗ್ಗೆ 4 10 ಆರತಿಯಲ್ಲಿ ಭಾಗವಹಿಸುವುದು ಅವಶ್ಯ. ಕೀರ್ತನೆ ನಿರಂತರವಾಗಿರುತ್ತದೆ. ನಾವು ಅದರಲ್ಲಿ ಭಾಗವಹಿಸಿದ್ದು. ತಿಂಡಿಯ ನಂತರ ವೃಂದಾವನ ಸುತ್ತುವುದು ಕಾರ್ಯಕ್ರಮ. ಮೊದಲು ಕಾಳಿಂಗ ಮರ್ದನದ. ಜಾಗಕ್ಕೆ ಹೋದೆವು. ಯಮುನಾ ನದಿಯಲ್ಲಿ ಈ ಕೃಷ್ಣ ಲೀಲೆ ನಡೆದ್ದದ್ದು. . ಕೃಷ್ಣ ಏರಿದ ಮರ ತೋರಿಸುತ್ತಾರೆ. ಅಲ್ಲಿಂದ ಸರ್ಪದ ಮೇಲೆ ನರ್ತಿಸುತ್ತಾ ಆಡಿದ್ದು. ಆದರೆ ಯಮುನಾ ಹಿಂದೆ ಸರಿದಿದೆ.. ಸುಮಾರು ದೂರದಲ್ಲಿ ಯಮುನೆ ಹರೆಯಿತ್ತಾಳೆ. ನಂತರ ಸುಮಾರು ಮಂದಿರಕ್ಕೆ ಹೊದೆವು. ಒಂದೊಂದಕ್ಕೂ ವಿಶೇಷ ಇದೆ.. ಈ ಮಂದಿರವನ್ನು ಪ್ರಭುಪಾದರ ನಂತರ ಬಂದ ಗುರುಗಳು ಕಟ್ಟಿಸಿದ್ದು. ಎಲ್ಲಾ ಮಂದಿರದ ಬಗ್ಗೆ ಬರೆಯುವ ಬದಲು ಲಿಂಕ್ ಕೊಡುತ್ತೇನೆ.
https://drive.google.com/drive/my-drive
ವೃಂದಾವನದಲ್ಲಿ ರಸ್ತೆಗಳು ಕಿರಿದು. ಆಟೋಗಳ ಹಾವಳಿ. ಹಾರ್ನ್ ಮಾಡುತ್ತಾ ಕಾಲು ಮೇಲೆ ಬಿಡುತ್ತಾರೆ...ಇಲ್ಲಿ ಕೋತಿಗಳು ತುಂಬಾ ತೊಂದರೆ ಕೊಡುತ್ತವೆ. ಏನು ಸಿಕ್ಕಿದ್ದರೂ, ಮೊಬೈಲ್, ಪರ್ಸ್, ಕೊನೆಗೆ ಕನ್ನಡಕ ಕೂಡ ತೆಗೆದು ಓಡುತ್ತವೆ. ನನ್ನ ಕನ್ನಡಕ ಕಿತ್ತುಕೊಂಡು ಹೋಯ್ತು.. ಹೆಲ್ಪ್ ಹೆಲ್ಪ್ ಎಂದು ಜೋರಾಗಿ ಕೂಗಿದೆ. ಸ್ಥಳೀಯ ಹುಡುಗ ಪ್ರೂಟಿ ಕೊಡಿ ಎಂದ .. ಅವನು ತಂದು ಅದಕ್ಕೆ ಕೊಟ್ಟ ಮೇಲೆ.. ಅದು ಕನ್ನಡಕ ಎಸೆಯಿತು.. ಹೋದ ಜೀವ ಮರಳಿ ಬಂದ ಹಾಗಾಯ್ತು.. ಇನ್ನೆಬ್ಬರಿಗೂ ಹೀಗೆ ಆಯ್ತು.. ಅವ್ರಿಗೆ ಸಿಗಲೇ ಇಲ್ಲ..
ದಿನ 2 : ತಿಂಡಿಗೆ ಮೊದಲೇ ಗೋಶಾಲೆಗೆ ಹೋದೆವು. ಇದು ಇಸ್ಕಾನ್ ಸಂಸ್ಥೆ ನಡೆಸುತ್ತದೆ. ಸುಮಾರು 20 ಎಕರೆ ಜಾಗದಲ್ಲಿ 1000 ಕ್ಕೂ ಹೆಚ್ಚು ಹಸು/ ಎತ್ತುಗಳಿವೆ.. ಅವು ಸ್ವಚ್ಛಂದವಾಗಿ ಓಡಾಡಿಕೊಂಡಿವೆ. ವಿಶೇಷ ಪೇಯ ತಿನ್ನಿಸಿದೆವು.. ಯಜ್ಞ ಶಾಲೆ, research ಇನ್ಸ್ಟಿಟ್ಯೂಟ್. ಗೋವಿನ ಉತ್ಪತ್ತಿಯನ್ನು ಮಾರಾಟ ಮಾಡುತ್ತಾರೆ
ನಂತರ ಬಸ್ ನಲ್ಲಿ ಹೊರಟೆವು. ಮೊದಲು ರಾಧರಾಣೀ ಬೆಳೆದ, ಲೀಲೆ ತೋರಿಸಿದ ಬರ್ಸಾನ ಎಂಬ ಜಾಗ.. ಒಂದು ಸಣ್ಣ ಪರ್ವತದ ಮೇಲಿದೆ. ಸುಂದರವಾದ ಮಂದಿರ.. ಇಲ್ಲಿ ಲಾಡ್ಲಾ ಲಾಡ್ಲಿ ಅಂತ ಪುಟ್ಟ ಕೃಷ್ಣ ರಾಧೇಯರ ವಿಗ್ರಹವಿದೆ.. ಫೋಟೋ ತೆಗೆಯಲು ಈ ಎಲ್ಲಾ ದೇವಸ್ಥಾನಗಳ ಪ್ರಾಂಗಣದಲ್ಲಿ ಬಿಡುವುದಿಲ್ಲ. ಕಥೆಯ ಪ್ರಕಾರ ಘೋರ ತಪಸ್ಸು ಮಾಡಿದ ಬ್ರಹ್ಮನ ಒಂದು ಶಿರಸ್ಸು ಮೇಲೆ ಈ ರಾಧ ಮಂದಿರವಿದೆ.
ಆಮೇಲೆ ಕೃಷ್ಣ ಬೆಳೆದ ನಂದಗಾವ್ ಗೆ ಹೋದೆವು. ಇದು ಕೂಡ ಒಂದು ಸಣ್ಣ ದಿಬ್ಬದ ಮೇಲಿದೆ. ಕೃಷ್ಣ, ಬಲರಾಮ, ಯಶೋಧ ಮತ್ತು ಆಕೆಯ ಪತಿಯ ವಿಗ್ರಹಗಳಿವೆ. ಸಂಕೀರ್ಣ ಪ್ರವೇಶ.. ಒಳಗೆ ಹೋಗಿ ಬರುವುದು ಸಾಹಸ. ಬರ್ಸಾನ ಮತ್ತು ನಂದಗಾವ್ ಸುಮಾರು 7 ಕಿಮೀ ಅಂತರದಲ್ಲಿದೆ. ಕೃಷ್ಣ ರಾಧೇಯರು ಪಂಜಿನ ಮೂಲಕ, ಸಂಜ್ಞ ಭಾಷೆಯಲ್ಲಿ ಮಾತನಾಡುತ್ತಿದ್ದರಂತೆ.. !!!
ದಿನ 3 : ಸಮಯ ಉಳಿಯಲೆಂದು, ತಿಂಡಿ ಕಟ್ಟಿಕೊಂಡು ಹೊರೆಟೆವು. ಮೊದಲಿಗೆ ಮಥುರನಲ್ಲಿರುವ ಕೃಷ್ಣನ ಜನ್ಮಸ್ಥಾನ. ಇಲ್ಲಿ ಅತೀ ಹೆಚ್ಚಿನ ಸುರಕ್ಷತೆಯ ವ್ಯವಸ್ಥೆ. ಮೊಬೈಲ್ ಕ್ಯಾಮೆರಾ ಯಾವುದೇ electronic ಉಪಕರಣಗಳಿರಲಿ, ವಾಚು , ನೀರಿನ ಬಾಟಲ್ ಕೂಡ ಬಿಡುವುದಿಲ್ಲ. ಸುಮಾರು 2 ಕಿ ಮಿ ನಡೆದು ಎಲ್ಲಾ ಚೆಕ್ ಮಾಡಿದಮೇಲೆ ಒಳಗೆ ಪ್ರವೇಶ. ಸುರಂಗದಂತೆ ನಡೆದು ಯಾವುದೇ ಕಿಟಕಿ ದ್ವಾರಗಳು ಇಲ್ಲದ.. ಅಂದಿನ ಜೈಲ್ ಒಳಗೆ ಕಾಲಿಟ್ಟಾಗ ದಿವ್ಯ ಕೃಷನ ಜನ್ಮಸ್ಥಳ ಕಾಣುತ್ತದೆ.. ಒಂದು ಬಾಲ ಕೃಷ್ಣನ ಪ್ರತಿಮೆ ಇಟ್ಟು ಸರಳ ಅಲಂಕಾರ ಮಾಡಿದ್ದರು. ಪಕ್ಕದಲ್ಲಿಯೇ ದೊಡ್ಡ ಮಸೀದಿ.. machine gun ಹಿಡಿದ ರಕ್ಷಣಾ ಪಡೆ ಸುತ್ತಾ ಕಾವಲಿಟ್ಟಿದ್ದಾರೆ. ಸ್ವಲ್ಪ ಪಕ್ಕದಲ್ಲಿ ಮೇಲೆ ಭವ್ಯವಾದ ಬಿರ್ಲಾ ಮಂದಿರ ಎಂದು ಗುರುತಿಸಿಕೊಂಡಿರುವ ಕೃಷನ ಮುದ್ದಾದ ವಿಗ್ರಹ ಬಲರಾಮ, ದೇವಕಿ ವಸುದೇವರ ಮೂರ್ತಿ ಗಳಿವೆ. ಪ್ರದಕ್ಷಿಣೆ ಹಾಕಿದಾಗ ಎದರು ನಿಲ್ಲುವ ಅದೇ ಮಸೀದಿ 😶😶
ಅಲ್ಲಿಂದ ರಾಧರಾಣಿ ಸಿಕ್ಕಿದ ರಾವಲ್ ಎಂಬ ಜಾಗ ದೊರೆಯುತ್ತದೆ. ಕೃಷ್ಣನ ಜನ್ಮದಲ್ಲಿ ನಡೆದ ಕಥೆ ಪ್ರಚಲಿತೆ.. ಅಷ್ಟೇ ರೋಚಕವಾದ ರಾಧೆ ಕಥೆ ಅಷ್ಟು ತಿಳಿದಿರಲಿಲ್ಲ. ತಂದೆ ಬ್ರಾಹ್ಮೀ ಮಹೂರ್ತದಲ್ಲಿ ಸ್ನಾನಕ್ಕೆಂದು ಹತ್ತಿರದಲ್ಲಿ ಯಮುನೆಗೆ ಹೋದಾಗ.. ಕಮಲದ ನಡುವೆ ಪ್ರಕಾಶಮಾನವಾಗಿ ಆಗತಾನೆ ಹುಟ್ಟಿರುವ ಹೆಣ್ಣು ಮಗು ಕಂಡ.. ಯಾರೂ ಕಾಣದಾಗ ತನ್ನ ಮನೆಗೆ ತಂದು ಪ್ರೀತಿಯಿಂದ ಸಾಕಿದ. ಅಷ್ಟು ತೇಜೋಮಯವಾದ ಬಾಲಕಿ ಕಣ್ಣು ಬಿಡಲಿಲ್ಲ, ಮಾತು ಆಡಲಿಲ್ಲ.. ಕಿವಿ ಕೇಳಲಿಲ್ಲ.. ದುಃಖದಿಂದಿರುವಾಗ, ನಾರದರು ಬಂದು, ಬಾಲಕಿಗೆ ವರ್ಷದ ನಂತರ ದೊಡ್ಡ ಯಜ್ಞ ಮಾಡಿ , ಬೃಜ ಕ್ಷೇತ್ರದಲ್ಲಿ ಇರುವ ಎಲ್ಲರನ್ನೂ ಕರೆದು ಉತ್ಸವ ಮಾಡು ಎಂದು ಸೂಚಿದರು. ಅಂತೆ ಮಾಡಿದಾಗ, ನಂದಗಾವ್ ಇಂದ ಕೃಷ್ಣ ತಂದೆ ತಾಯಿಯರೊಡನೆ ಬಂದ.. 6 ತಿಂಗಳ ಪೋರ ಎಲ್ಲರನ್ನೂ ಆಕರ್ಷಿಸಿದ್ದ. ರಾಧೇಯನ್ನು ಕೂಡಿಟ್ಟ ಕೋಣೆಗೆ ಬಂದ. ರಾಧೆ ಕಣ್ಣು ತೆರೆದಳು. ನಿಧಾನವಾಗಿ 'ಶ್ಯಾಮ್ ಶ್ಯಾಮ್' ಎಂದು ಕರೆದಳು.. ಕಿವಿಕೇಳಿಸಿದವು.. ರಾಧೆ ಕೃಷ್ಣನಿಗಿಂತ ದೊಡ್ಡವಾಳದರೂ ಅನನ್ಯ ಭಕ್ತಿ ಪ್ರೇಮದ ಸಂಖ್ಯೆಯವಾದಳು.. ಈಗ ಅಲ್ಲೊಂದು ರಾಧೆಯ ಮಂದಿರ ಇದೆ.. ಅಂಬೆಗಾಲಿಡುತ್ತಿರುವ ರಾಧೆಯ ಮುದ್ದು ವಿಗ್ರಹ ಇದೆ
ನಂತರ ನಾವು ರಮನ್ ರೇತಿ ಎಂಬ ಸ್ಥಳಕ್ಕೆ ಬಂದೆವು.. ಕೃಷ ಬಲರಾಮ ಆಡಿದ ವಿಶಾಲ ಜಾಗ. ತೆಳ್ಳಗಿನ ಮರಳು. ಈ ಮಣ್ಣಿನಲ್ಲಿ ಹೊರಲಾಡುವುದು, ಆ ಮಣ್ಣನು ತೆಗೆದುಕೊಂಡು ಹೋಗುವುದು ಪ್ರತೀತಿ. ಕೃಷ್ಣ ನಡೆದಾಡಿದ ಅವನ ಪಾದದ ದೂಳಿ ನಮಗೂ ಸೋಕಲಿ ಎಂದು. ಈ ಮರಳನ್ನು ನೋಡಿದರೆ ಪ್ರಾಯಶಃ ಯಮುನೆಯ ದಡವಾಗಿತ್ತೇನೋ.. ಅಲ್ಲೊಂದು ಮಂದಿರ ಇದೆ..
ದಿನ 4 : ಈ ದಿನ ಸಂಪೂರ್ಣವಾಗಿ ಗೋವರ್ಧನ ಗಿರಿಯ ಪ್ರದಕ್ಷಿಣೆ.. 21 ಕಿ ಮಿ ಇದೆ ಅಂತ ಹೇಳಿದರು. ನನ್ನ ಪೇಡಾಮಿಟರ್ 33 ಕಿ ಮಿ ನಡೆದಿದ್ದೆವು.. ಈ ಪರ್ವತ ಶ್ರೇಣಿ ವಿಶೇಷವಾಗಿದೆ. ಎಲ್ಲೂ ಎತ್ತರವಿಲ್ಲ.. ಸುಮಾರು 50 ಅಡಿ ಇರಬಹುದು. ಆದರೆ ವಿಶಾಲ ಜಾಗದಲ್ಲಿ ಹರಡಿದೆ. ಪ್ರಾಯಶಃ ಮೇಲಿಂದ ನೋಡಿದರೆ ಛತ್ರಿಯಂತೆ ಕಾಣಬಹುದು. ಅದೇ ಅಲ್ಲವೇ ಕೃಷ್ಣ ಕಿರುಬೆರಲಿನಲ್ಲಿ ಎತ್ತಿ ವರುಣನ ಅಹಮ್ ಮುರಿದ್ದದ್ದು. ಇಲ್ಲಿ ಹಲವಾರು ಕ್ಷೇತ್ರಗಳಿವೆ. ನರಸಿಂಹ ಸ್ವಾಮಿಯ ದೇವಸ್ಥಾನ ಗೋವಿಂದ ಕುಂಡ, ಶ್ಯಾಮ್ ಕುಂಡ ಮುಂತಾದ ದೇವಸ್ಥಾನಗಳಿವೆ. ಸುಮಾರು 4 ಗಂಟೆಗೆ ನಡೆಯಲು ಶುರುಮಾಡಿದ ನಾವು, ಪ್ರರಿಕ್ರಮ ಮುಗಿಸಿದಾಗ 10: 30. ರಾಧಾಕುಂಡಲ್ಲಿ ವಿಶಾಂತಿ ಪಡೆದುಕೊಂಡು ಮರಳಿದೆವು
ಧನ್ಯ ಅನುಭವ, ಪ್ರತಿ ದಿನ 4 ಘಂಟೆಗೆ ತಯಾರಿರುವುದು, ಸಂಜೆ 5 ರಿಂದ 8 ಘಂಟೆ ತನಕ ಪ್ರವಚನ, ಕೀರ್ತನ ಅಪೂರ್ವ ಆನಂದ ತಂದಿತು. 5 ದಿನಗಳ ಸುಂದರ ಕ್ಷಣಗಳ ನೆನಪು ಹೊತ್ತು ಮರಳಿದವು.